ಆಂಧ್ರ ಪ್ರದೇಶ: ಟಿಡಿಪಿಯ ಮುಸ್ಲಿಂ ನಾಯಕರಿಂದ ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ : ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಸಂಕಷ್ಟಆಂಧ್ರ ಪ್ರದೇಶ: ಬಲ್ಲ ಮೂಲಗಳ ಪ್ರಕಾರ, ವಕ್ಫ್ ತಿದ್ದುಪಡಿ ಮಸೂದೆ ವಿಚಾರದಲ್ಲಿ ಅತ್ತ ತನ್ನ ಪಕ್ಷದ ಮುಸ್ಲಿಂ ನಾಯಕರನ್ನು ಬಿಟ್ಟು ಕೊಡಲಾಗದೆ, ಇತ್ತ ಬಿಜೆಪಿಯನ್ನು ವಿರೋಧಿಸಲಾಗದೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾಯ್ಡು ಹೆಣಗಾಡುತ್ತಿದ್ದಾರೆವಕ್ಫ್ ತಿದ್ದುಪಡಿ ಮಸೂದೆ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ದವಾಗಿದೆ ಎಂಬ ಕಾರಣಕ್ಕೆ, ಅದನ್ನು ವಿರೋಧಿಸುವಂತೆ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಸ್ಲಿಂ ನಾಯಕರು, ಪಕ್ಷದ ನಾಯಕ ಹಾಗೂ ಅಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಒತ್ತಡ ಹೇರಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಭಾಗವಾಗಿರುವ ನಾಯ್ಡು ಅವರನ್ನು ಈ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಸಿದೆ.ಪ್ರಸ್ತುತ, ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪರಿಶೀಲನೆಯಲ್ಲಿರುವ ವಕ್ಫ್ ತಿದ್ದುಪಡಿ ಮಸೂದೆಯ ಕುರಿತ ವರದಿಯು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಸಂಸತ್ ಒಳಗೆ ಮತ್ತು ಹೊರಗೆ ತಿದ್ದುಪಡಿ ಮಸೂದೆಯನ್ನು ಬೆಂಬಲಿಸದಂತೆ ಟಿಡಿಪಿಯ ಮುಸ್ಲಿಂ ನಾಯಕರು ನಾಯ್ಡುಅವರಿಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.ಕೇಂದ್ರದಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ, ಬಿಜೆಪಿ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಲಾಗ ಪರಿಸ್ಥಿಯಲ್ಲಿದೆ. ರಾಜ್ಯ ಮಟ್ಟದಲ್ಲಿ ಮುಸ್ಲಿಂ ನಾಯಕರನ್ನೂ ಕಡೆಗಣಿಸುವಂತಿಲ್ಲ. ಹಾಗಾಗಿ, ವಕ್ಫ್ ಮಸೂದೆ ಕುರಿತು ಟಿಡಿಪಿ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.ವಕ್ಫ್ ತಿದ್ದುಪಡಿ ಮಸೂದೆಯು ಎನ್ಡಿಎ ಸರ್ಕಾರವನ್ನು ಬೆಂಬಲಿಸಿದ ಬಳಿಕ ನಾಯ್ಡು ಅವರ ಜಾತ್ಯತೀತ ಇಮೇಜ್ಗೆ ಎದುರಾದ ಮೊದಲ ಅಗ್ನಿ ಪರೀಕ್ಷೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ಫಜ್ಲುರಹೀಂ ಮುಜದ್ದಿದಿ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗವು ಅಕ್ಟೋಬರ್ 23ರಂದು ಅಮರಾವತಿಯಲ್ಲಿ ನಾಯ್ಡು ಅವರನ್ನು ಭೇಟಿ ಮಾಡಿ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ವಿರೋಧಿಸುವಂತೆ ಒತ್ತಾಯಿಸಿದೆ.ನಾಯ್ಡು ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎಂ.ಡಿ ಫಾರೂಕ್ ಮತ್ತು ಆಂಧ್ರ ಪ್ರದೇಶದ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಮೊಹಮ್ಮದ್ ಅಹ್ಮದ್ ಷರೀಫ್ ಅವರು ಈ ನಿಯೋಗದಲ್ಲಿದ್ದರು. ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ಈ ನಾಯಕರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಸ್ತಾಪಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯಕ್ಕೆ ಹೇಗೆ ವಿರೋಧವಾಗಿದೆ ಎಂದು ವಿವರಿಸಿದ್ದಾರೆ.ಟಿಡಿಪಿಯ ಮುಸ್ಲಿಂ ಮುಖಂಡರು ಚುನಾವಣಾ ಪ್ರಚಾರದ ಸಮಯದಲ್ಲಿ, ಟಿಡಿಪಿ ಜಾತ್ಯತೀತತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುವುದನ್ನು ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾಗಿ ಒತ್ತಿ ಹೇಳಿದ್ದರು.ಪ್ರತಿ ಸಾರ್ವಜನಿಕ ಸಭೆಯಲ್ಲಿ, ನಾಯ್ಡು ಹಿಂದೆ ಸಮ್ಮಿಶ್ರ ಸರ್ಕಾರಗಳ ಪಾಲುದಾರರಾಗಿ ಅಥವಾ ಹೊರಗಿನ ಬೆಂಬಲಿಗರಾಗಿ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಕೆಲಸ ಮಾಡಿದ್ದಾರೆ ಎಂದಿದ್ದರು.ನಾಯ್ಡು ಬೆಂಬಲಿಸಿರುವ ಬಿಜೆಪಿ ಪಕ್ಷ ವಕ್ಫ್ ತಿದ್ದುಪಡಿ ಮಸೂದೆ ತಂದಿದೆ. ಅದರಲ್ಲಿರುವ ಅಂಶಗಳು ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ದವಿದೆ ಎಂಬುವುದು ಸಮುದಾಯಕ್ಕೆ ಮನದಟ್ಟಾಗಿದೆ. ಹಾಗಾಗಿ, ತಾವು ಬೆಂಬಲಿಸಿ ಮತ ನೀಡಿರುವ ಟಿಡಿಪಿ ಅಥವಾ ಚಂದ್ರಬಾಬು ನಾಯ್ಡು ಸಮುದಾಯದ ಪರ ನಿಲ್ಲಬೇಕು ಎಂಬುವುದು ಮುಸ್ಲಿಮರ ಆಗ್ರಹ.