ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಕಂಟ್ರೋಲ್​ನಲ್ಲಿ ಇದೆ, ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಸೇರ್ಪಡೆ- ಜಗದೀಶ್ ಶೆಟ್ಟರ್

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ವ್ಯವಸ್ಥಿತವಾಗಿ ಸಂಚು ನಡೆಸಿ ನನಗೆ ಈ ಬಾರಿ ಚುನಾವಣೆಗೆ ಟಿಕೆಟ್ ನಿರಾಕರಿಸಲಾಗಿದೆ. ಕರ್ನಾಟಕದ ಕೆಲವು ನಾಯಕರಿಂದ ನನಗೆ ತೊಂದರೆಯಾಗಿದೆ, ಅವಮಾನವಾಗಿದೆ. ರಾಜ್ಯ ಬಿಜೆಪಿಯಲ್ಲಿ ಪರಿಸ್ಥಿತಿ ಸರಿಯಿಲ್ಲ, ಆ ಪಕ್ಷದಲ್ಲಿ ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸತ್ತು ಇವತ್ತು ಹೊರಬಂದು ಸಂತೋಷ, ಸಮಾಧಾನದಿಂದ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿಯಿಂದ ಬಂಡಾಯವೆದ್ದು ಹೊರಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಂದ ಪಕ್ಷದ ಬಾವುಟವನ್ನು ಸ್ವೀಕರಿಸಿ ಅಧಿಕೃತವಾಗಿ ಸೇರ್ಪಡೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾವು ಏಕೆ ಬಿಜೆಪಿ ತೊರೆದು ಬಂದಿದ್ದೇನೆ ಎಂಬುದನ್ನು ವಿವರವಾಗಿ ಹೇಳಿದರು.ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ನಾನು ಪ್ರಮುಖ. ನಾನು ಜನಸಂಘ, ಸಂಘ ಪರಿವಾರದಿಂದ ಬಂದ ವ್ಯಕ್ತಿ, ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದೇವೆ. ಇಂದು ಬಹಳಷ್ಟು ಜನರಿಗೆ ಅಶ್ಚರ್ಯ ಆಗಿದೆ. ಯಾಕೆ ಕಾಂಗ್ರೆಸ್ ಸೇರ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಹಲವಾರು ತಿಂಗಳ ಹಿಂದೆ ಹಿರಿಯ ನಾಯಕನಾಗಿ ನನಗೆ ಏನು ವೇದನೆ ಆಗಿದೆ ಅದು ಯಾರ ಗಮನಕ್ಕೂ ಬರಲಿಲ್ಲ ಎಂದು ವೇದನೆ ತೋಡಿಕೊಂಡರು.ನಾನು ಮಾಜಿ ಸಿಎಂ ಬಿಎಸ್  ಯಡಿಯೂರಪ್ಪ, ದಿವಂಗತ ಮಾಜಿ ಸಂಸದ ಅನಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿ ಎಲ್ಲ ರೀತಿ ಗೌರವ ಸ್ಥಾನಮಾನ ನೀಡಿದೆ. ಅದಕ್ಕೆ ಪ್ರತಿಯಾಗಿ ನಾನೂ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ಆರು ಬಾರಿ 1994 ರಿಂದ ಸ್ಪರ್ಧೆ ಮಾಡಿದ್ದೇನೆ. ಇದು ಏಳನೇ ಬಾರಿ ನಾನು ಸ್ಪರ್ಧೆ ಮಾಡಬೇಕಾಗಿದೆ. ಸಹಜವಾಗಿ ಟಿಕೇಟ್ ಇಲ್ಲ ಅಂದಾಗ ಆಘಾತ ಆಯ್ತು ವೇದನೆ ಆಯ್ತು. ಹಿರಿಯ ನಾಯಕನಾಗಿ ನನಗೆ ಗೌರವ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಗೌರವಯುತವಾಗಿ ಕಳುಹಿಸಿಕೊಡಬೇಕಿತ್ತು: ನಾನು ಅಧಿಕಾರದ ಆಸೆಗಾಗಿ ಬಿಜೆಪಿ ಪಕ್ಷ ತೊರೆದಿಲ್ಲ, ಕೆಲ ತಿಂಗಳ ಹಿಂದೆ ಸಾಮಾನ್ಯ ಕಾರ್ಯಕರ್ತನಿಗೆ, ಚಿಕ್ಕ ಹುಡುಗನಿಗೆ ಹೇಳುವ ರೀತಿಯಲ್ಲಿ ನಿಮಗೆ ಮತ್ತು ಈಶ್ವರಪ್ಪಗೆ ಟಿಕೆಟ್ ಇಲ್ಲ ಎಂದು ಹೇಳಿದರು. ಟಿಕೆಟ್ ಇಲ್ಲ ಎಂದಾಗ ನನಗೆ ಆಘಾತವಾಯಿತು. ಕಳೆದ 6 ತಿಂಗಳಿನಿಂದ ನನ್ನನ್ನು ಕಡೆಗಣಿಸಿದ್ದರು, ಇಷ್ಟು ವರ್ಷಗಳಿಂದ ಪಕ್ಷದಲ್ಲಿದ್ದವರಿಗೆ ಈ ರೀತಿ ಹೇಳುವುದೇ, ಕೊನೆಗೆ ಪಕ್ಷ ಬಿಡುತ್ತೇನೆಂದಾಗ ಕೇಂದ್ರದಲ್ಲಿ ಹುದ್ದೆ ನೀಡುತ್ತೇವೆ ಎಂದರು ಆಫರ್ ಕೊಟ್ಟರು, ಅದೇಕೆ, ಅದನ್ನು ಆರಂಭದಲ್ಲಿಯೇ ಹೇಳಬಹುದಾಗಿ ತ್ತಲ್ಲವೇ, ಇಲ್ಲ ದೆಹಲಿಗೆ ಕರೆಸಿ ನಿಮಗೆ ಟಿಕೆಟ್ ನೀಡುತ್ತಿಲ್ಲ, ಬೇರೆ ಹುದ್ದೆ ನೀಡುತ್ತೇವೆ ಎಂದು ಆರಂಭದಲ್ಲಿಯೇ ಹೇಳಬಹುದಾಗಿತ್ತಲ್ಲವೇ ಎಂದು ಜಗದೀಶ್ ಶೆಟ್ಟರ್ ಕೇಳಿದರು.ಸ್ಥಳೀಯ ನಾಯಕರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ: ಬಿಜೆಪಿಯ ಸ್ಥಳೀಯ ನಾಯಕರಲ್ಲಿ ಸಮಸ್ಯೆಯಿದೆ. ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತೆ.ನನಗೆ ಜೆಪಿ ನಡ್ಡಾ, ಅಮಿತ್ ಶಾ ಅವರ ಬಗ್ಗೆ ಸಮಸ್ಯೆಯಿಲ್ಲ, ಅವರನ್ನು ನಾನು ಆರೋಪ ಮಾಡುತ್ತಿಲ್ಲ.  ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಕಂಟ್ರೋಲ್ನಲ್ಲಿ ಇದೆ. ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡ್ತಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಟೀಕೆ ಮಾಡುತ್ತಿಲ್ಲ. ಲಿಂಗಾಯತ ನಾಯಕರಲ್ಲಿ ಬಿಎಸ್ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಆರೋಪಿಸಿದರು.ಪಕ್ಷದ ಸದಸ್ಯತ್ವ ಬಿ ಫಾರಂ ಪಡೆದ ಶೆಟ್ಟರ್: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ಥಾನ ನೀಡಿ ಬಿ ಫಾರಂನ್ನು ಕೂಡ ಇದೇ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೀಡಿದರು. ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಕೇಂದ್ರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ.

Share with friends

Related Post

Leave a Reply

Your email address will not be published.